DARK MODE 

ಬುಧವಾರ, ಅಕ್ಟೋಬರ್ 31, 2018

ಮತ್ತೆ ಬಂದಿತು ಆ ಕರಾಳ ದಿನ....ನವೆಂಬರ್ 01

kannada flag ಗೆ ಚಿತ್ರದ ಫಲಿತಾಂಶ
ಮನಸಿನಲ್ಲಿ ನನ್ನ ಮೇಲೆ ದ್ವೇಷ ಹುಟ್ಟಿತೇ ಬಂಧುಗಳೆ?...ಯಾಕಿಲ್ಲ ತಾನೆ?


ಭಾರತದ ಇತರ ರಾಜ್ಯಗಳೊಂದಿಗೆ ಕರ್ನಾಟಕ ರಾಜ್ಯ ರೂಪೀಕರಣಗೊಂಡು 62 ವರ್ಷ ತುಂಬಿದ ನವೆಂಬರ್ 1ನ್ನು ದಿನವನ್ನು ಕರಾಳ ದಿನ ಎಂದರೆ ರಕ್ತ ಮಾಂಸದಿಂದ ಕೂಡಿದ ದೇಹ ಹೊಂದಿರುವ ಯಾವ ರಾಜ್ಯಪ್ರೇಮಿ ಸಹಿಸಿಯಾನು?

1956ರ ನವೆಂಬರ್ 01 ರಂದು ನಮ್ಮ ದೇಶದ ಹಲವಾರು ಸಣ್ಣ-ಪುಟ್ಟ ಸಾಮಂತ ರಾಜ್ಯಗಳು ಭಾಷೆಯ ಆಧಾರದಲ್ಲಿ ಭಾಷಾವಾರು ಪ್ರಾಂತ್ಯಗಳಾಗಿ ಪುರ್ನವಿಂಗಡನೆ ಆಗಿರುವುದು ನಮಗೆಲ್ಲ ತಿಳಿದ ವಿಚಾರ. ರಾಜಕೀಯ ದೃಷ್ಟಿಯಿಂದ ನೋಡುವುದಾದರೆ ಭಾಷಾವಾರು ಪ್ರಾಂತ್ಯಗಳ ರಚನೆಯಿಂದ ಭಾರತೀಯರು ಸಂತೋಷಗೊಂಡಿದ್ದಾರೆ. ಆದರೆ ಸಾಂಸ್ಕøತಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಭಾಷಾವಾರು ಪ್ರಾಂತ್ಯಗಳ ರಚನೆ ಅಸಂಪೂರ್ಣವಾಗಿದೆ ಎನ್ನುವಲ್ಲಿ ಎರಡನೆಯ ಮಾತಿಗೆ ಅವಕಾಶವಿಲ್ಲ. ಅಸಮರ್ಪಕ ಭಾಷಾವಾರು ಪ್ರಾಂತ್ಯಗಳ ರಚನೆಯಿಂದ ಹೆಚ್ಚಿನ ಎಲ್ಲಾ ಪ್ರಾಂತ್ಯದ ಗಡಿಪ್ರದೇಶದ ಬಹುಸಂಖ್ಯಾತರೆನಿಸಿದ್ದ ಜನತೆ ಗಡಿನಿರ್ಣಯದ ಸಮಸ್ಯೆಯಿಂದ ನೆರೆಯ ರಾಜ್ಯದ ಅಲ್ಪಸಂಖ್ಯಾತರಾಬೇಕಾಯಿತು.

ಇದಕ್ಕೆ ಉತ್ತಮ ಉದಾಹರಣೆಯೇ ಕಾಸರಗೋಡಿನ ಕನ್ನಡಿಗರು. ಗಡಿ ನಿರ್ಣಯದ ಸಮಸ್ಯೆಯಿಂದಾಗಿ ಕರ್ನಾಟಕ ಸೇರಬೇಕಿದ್ದ ಅಚ್ಚ ಕನ್ನಡ ನೆಲ ಕಾಸರಗೋಡು ಅನ್ಯಾಯವಾಗಿ ಕೇರಳದ ಪಾಲಾಯಿತು. ನಾವು ಏನೆಂದು ನವೆಂಬರ್ 1ನ್ನು ಆಚರಿಸಲಿ.....? ಗಡಿನಾಡ ಕನ್ನಡಿಗರಿಗೆ ಪಾಲಿಗೆ ಇದೊಂದು ಕರಾಳ ದಿನವಲ್ಲದೆ ಮತ್ತಿನ್ನೇನು...?

ಕೇರಳ-ಕರ್ನಾಟಕ ಪ್ರಾಂತ್ಯ ಪುನರ್ವಿಂಗಡನೆ ಆದ 1956 ರಿಂದಲೇ ಕೇರಳಕ್ಕೆ ಸೇರಿಹೋದ ಕಾಸರಗೋಡಿನ ಕನ್ನಡಿಗರು ಬೇಡಿಕೆ-ಹೋರಾಟಗಳಿಂದ ಸಕ್ರೀಯರಾಗಿದ್ದು 21ನೇ ಶತಮಾನದ ಆರಂಭದೊಂದಿಗೆ ಬೂದಿ ಮುಚ್ಚಿದ ಕೆಂಡವಾಗಿದ್ದ ಗಡಿನಾಡ ಹೋರಾಟಗಾರರು ಕೇರಳ ಸರಕಾರ ಜಾರಿಗೊಳಿಸಿದ "ಮಾತೃಭಾಷೆ ಮಲಯಾಳ ಅಧಿನಿಯಮ"ದ ಪರಿಣಾಮವಾಗಿ, ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗೆ ಕನ್ನಡ ಶಾಲೆಗಳಲ್ಲಿ ಕನ್ನಡ ಕಲಿಯುವ ಹಕ್ಕು ನಿರಾಕರಿಸಲ್ಪಡುವ ಸನ್ನಿವೇಷ ಒದಗಿದಾಗ ಮತ್ತೆ ಕ್ರೀಯಾಶೀಲರಾಗಿದ್ದಾರೆ. 2017 ರ ಮೇ 23ರಂದು ಕಾಸರಗೋಡು ಜಿಲ್ಲಾಧಿಕಾರಿ ಕಛೇರಿ ದಿಗ್ಬಂಧನ ಇದಕ್ಕೆ ಸಾಕ್ಷಿ.

ನಾಳೆ (ನವೆಂಬರ್ 1) ಕಾಸರಗೋಡಿನ ಹಲವೆಡೆ ಕನ್ನಡಿಗರು ಧರಣಿ ಮಾಡುತ್ತಾ ತಮ್ಮ ಹಕ್ಕಿಗಾಗಿ ಹೋರಾಡುತ್ತಾರೆ. ಇದೇ ಬರುವ ನವೆಂಬರ್ 28 ರಂದು ಕೆಲವು ಕನ್ನಡ ಪರ ಸಂಘಟನೆಗಳು ಸಂಸತ್ತಿನ ಮುಂದೆ ಕಾಸರಗೋಡಿನ ಕನ್ನಡಿಗರ ಸಮಸ್ಯೆಯ ಕುರಿತು ಧರಣಿ ನಡೆಸಲು ಹೊರಟ್ಟಿದ್ದಾರೆ.

ಇಂದಿಗೂ ಕರ್ನಾಟಕದ ಅದೆಷ್ಟೋ ಖ್ಯಾತ ಸಾಹಿತಿಗಳು, "ಇಂದು ನೀವು ನಿಜವಾದ ಕನ್ನಡಿಗರನ್ನು ನೋಡಬೇಕಾದರೆ ಕಾಸರಗೋಡಿಗೆ ಹೋಗಿ" ಎಂದು ತಮ್ಮ ಭಾಷಣದ ಮಧ್ಯೆ ಕಾಸರಗೋಡಿನ ಕನ್ನಡತನವನ್ನು ಹೊಗಳುವುದನ್ನು ಪ್ರತ್ಯಕ್ಷವಾಗಿಯೂ, ವಾರ್ತಾ ವಾಹಿನಿಗಳ ಮೂಲಕವೂ ನಾನು ಕೇಳಿದ್ದೇನೆ.

ಮುಕ್ತಾಯ: ಕಾಸರಗೋಡಿನ ಕನ್ನಡಿಗರಿಲ್ಲದೆ ನೀವು ಕಂಡ ಅಖಂಡ ಕರ್ನಾಟಕದ ಕನಸು ನನಸಾಗುವುದೇ ಕನ್ನಡಿಗರೆ.....?

ಇನ್ನೊಮ್ಮೆ: ಕನ್ನಡಿಗರಿಗೆ ಪಾಲಿಗೆ ಇದೊಂದು ಕರಾಳ ದಿನವಲ್ಲದೆ ಮತ್ತಿನ್ನೇನು...?

kannada ಗೆ ಚಿತ್ರದ ಫಲಿತಾಂಶ


ಸಿರಿಗನ್ನಡಂ ಗೆಲ್ಗೆ...ಗಡಿನಾಡು ಬಾಳ್ಗೆ...

1 ಕಾಮೆಂಟ್‌:

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು